ಬಾಗಲಕೋಟೆ; ಟೋಪಿ ಧರಿಸಿದ್ದಕ್ಕೆ ಗಲಾಟೆ, ಹಲ್ಲೆ
ಬಾಗಲಕೋಟೆ: ಟ್ಯೂಷನ್ ಕ್ಲಾಸ್ನಲ್ಲಿ ಟೋಪಿ ಧರಿಸಿದ ಬಾಲಕರಿಗೆ ಕೀಟಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಆಲಂಪೇಟೆಯಲ್ಲಿ ನಡೆದಿದೆ.
ರಿಯಾನ್ ಎಂಬ 9ನೇ ತರಗತಿ ಬಾಲಕನಿಗೆ ಸಹಪಾಠಿ ಯುವಕರು ಕಿಚಾಯಿಸಿದ್ದಾರೆ. ನೊಂದ ಬಾಲಕನ ಪರ ಹಾಗೂ ಕೀಟಲೆ ಮಾಡಿದ ಬಾಲಕರ ಪರ ಬಂದ ಯುವಕರ ಗುಂಪಿನ ಮಧ್ಯೆ ಪರಸ್ಪರ ಗಲಾಟೆ ನಡೆದಿದ್ದು, ಐವರ ಮೇಲೆ ಹಲ್ಲೆ ಮಾಡಲಾಗಿದೆ.
ಹಲ್ಲೆಗೊಳಗಾದವರಲ್ಲಿ ಮೂವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಹ್ಮದ್ ಗುಳೇದಗುಡ್ಡ(18), ಸಮೀರ್ ಬಳಗಾನೂರ(20) ಹಾಗೂ ಸಾಹಿಲ್ ಪಟಂಗಲಿ(19) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಮೇಶ್ ಅದಾಪುರ, ಅನಿಲ ಗುಜ್ಜಲಮಟ್ಟಿ, ಮಹೇಶ, ನಾಗೇಶ್ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಆರೋಪಿಸಿದ್ದಾರೆ.
ದೂರು ನೀಡಿದ್ದಕ್ಕೆ ಆಕ್ರೋಶ: ಗಲಾಟೆಯಲ್ಲಿ ತನ್ನ ವಿರುದ್ಧ ದೂರು ನೀಡಿದ್ದು ಏಕೆ ಎಂದು ತಂಗಡಗಿ ಮಂಜು ಎಂಬ ಯುವಕ ಗಾಯಾಳುಗಳಿಗೆ ಬೆದರಿಕೆ ಹಾಕಿದ್ದು, ನನ್ನ ಹೆಸರು ಏಕೆ ಪೊಲೀಸರಿಗೆ ಹೇಳಿದ್ದೀರಿ, ನಾನೇನು ಮಾಡಿದ್ದೆ ಎಂದು ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.
‘ಟ್ಯೂಷನ್ ಕ್ಲಾಸ್ನಲ್ಲಿ ಟೋಪಿ ಧರಿಸಿದಕ್ಕೆ ಗಲಾಟೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡಲಾಗುತ್ತಿದೆ. ಈ ಗಲಾಟೆಯಲ್ಲಿ ಎರಡು ಗುಂಪಿನವರೂ ಗಾಯಗೊಂಡಿದ್ದಾರೆ. ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿದ ಬಳಿಕವೇ ಬಂಧನದ ಕುರಿತಂತೆ ಅಧಿಕೃತ ಹೇಳಿಕೆ ನೀಡುತ್ತೇವೆ.’
ಎಂದು ಭರಮಪ್ಪ ಜಗಲಾಸರ್, ಬಾಗಲಕೋಟೆ ಪೊಲೀಸ್ ಅಧೀಕ್ಷಕ