ಆರೆಸ್ಸೆಸ್ ಹೇಳಿದಂತೆ ಕೇಳದಿದ್ದರೆ ಪ್ರಧಾನಿಗೂ ಬೆಲೆ ಇಲ್ಲ: ರಾಮಲಿಂಗಾರೆಡ್ಡಿ

ಆರೆಸ್ಸೆಸ್ ಹೇಳಿದಂತೆ ಕೇಳದಿದ್ದರೆ ಪ್ರಧಾನಿಗೂ ಬೆಲೆ ಇಲ್ಲ: ರಾಮಲಿಂಗಾರೆಡ್ಡಿ

ಬೆಂಗಳೂರು: ಬಿಜೆಪಿಯಲ್ಲಿ ಸಂಘ ಪರಿವಾರದ್ದೇ ಅಂತಿಮ ನಿರ್ಧಾರ. ಎಲ್.ಕೆ.ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿ ಜಿನ್ನಾ ಅವರನ್ನು ಜಾತ್ಯತೀತ ನಾಯಕ ಎಂದು ಹೇಳಿದ ತಕ್ಷಣವೇ ಅವರನ್ನು ಅವರ ಸ್ಥಾನದಿಂದ ಕೆಳಗಿಳಿಸಿದರು. ಅಲ್ಲಿ ಸಂಘ ಪರಿವಾರ ಹೇಳಿದಂತೆ ಪ್ರಧಾನಮಂತ್ರಿ, ಕೇಂದ್ರ ಮಂತ್ರಿಗಳು ಹಾಗೂ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಕೇಳಬೇಕು. ಇಲ್ಲದಿದ್ದರೆ ಅವರಿಗೆ ಬೆಲೆ ಇಲ್ಲವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.

 

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ತ್ರಿಶೂಲಕ್ಕೆ ಅದರದೇ ಆದ ವಿಶೇಷ ಸ್ಥಾನಮಾನ ನೀಡಲಾಗಿದೆ. ಇಂದು ಮಂಗಳೂರಿನಲ್ಲಿ ಅದನ್ನು ಹಂಚಲಾಗಿದ್ದು, ಅದನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಲಿ. ಬೇರೆ ಇತರೆ ಕೆಲಸಕ್ಕೆ ಬಳಸುವುದು ಬೇಡ ಎಂದು ಸಲಹೆ ನೀಡಿದರು.

 

ಪಸೆರ್ಂಟೇಜ್ ರಾಜಕಾರಣ: ನಮ್ಮ ನಾಯಕರಾಗಲಿ, ಬೇರೆಯವರಾಗಲಿ ಲೋಕಾರೂಢಿಯಲ್ಲಿ ಮಾತನಾಡಿದರೆ ಅದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ. ಯಡಿಯೂರಪ್ಪ ವಿರುದ್ಧ ಅವರ ಪಕ್ಷದ ಶಾಸಕರಾದ ಯತ್ನಾಳ್, ವಿಶ್ವನಾಥ್ ಹಾಗೂ ಇತರೆ ನಾಯಕರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಈ ಬಗ್ಗೆ ಬಿಜೆಪಿಯವರು ಗಮನ ಹರಿಸಲಿ ಎಂದು ಅವರು ಹೇಳಿದರು.

 

ಕೇಂದ್ರ ಸರಕಾರ ದೇಶದ ದೊಡ್ಡ ಉದ್ಯಮಿಗಳಿಗೆ 7.5 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಿಲ್ಲ. ಆ ಬಗ್ಗೆ ಜನ ಎಷ್ಟೆಲ್ಲಾ ಮಾತನಾಡಿದ್ದಾರೆ. ಸಲೀಮ್ ಹಾಗೂ ಉಗ್ರಪ್ಪ ಮಾತನಾಡಿಕೊಂಡಿರುವುದಕ್ಕೆ ಯಾವುದೇ ಆಧಾರವಿಲ್ಲ. ಇದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ಆದರೆ ಅದಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದು ರಾಮಲಿಂಗಾರೆಡ್ಡಿ ಹೇಳಿದರು.

 

ನರೇಂದ್ರ ಮೋದಿ ಬಂದು ನಮ್ಮ ಸರಕಾರವನ್ನು 10 ಪರ್ಸೆಂಟ್ ಸರಕಾರ ಎಂದಿದ್ದರು. ಆಗ ನಾನು ಮೋದಿ ಅವರು ಸಿಎಂ ಆಗಿದ್ದಾಗ ಮಾಡಿದ್ದನ್ನು ಸಿದ್ದರಾಮಯ್ಯ ಅವರಿಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದೆ. ಈಗ ರಾಜ್ಯದಲ್ಲಿ ಎಷ್ಟು ಪರ್ಸಂಟೇಜ್ ಆಗಿದೆ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

 

ಊಹಾಪೋಹಗಳ ಆರೋಪ ಯಾರನ್ನೂ ಬಿಟ್ಟಿಲ್ಲ. ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರಂತಹ ದಕ್ಷ, ಪ್ರಾಮಾಣಿಕ ನಾಯಕರ ಮೇಲು ಈ ರೀತಿ ಸುಳ್ಳು ಅಕ್ರಮ ಆರೋಪ ಕೇಳಿಬಂದಿತ್ತು. ರಾಜಾಜಿನಗರದಲ್ಲಿ ನೋಡಿದ್ದೆಲ್ಲವನ್ನು ನಿಜಲಿಂಗಪ್ಪ ಅವರದ್ದೇ ನಿವೇಶನ ಎಂದು ಹೇಳುತ್ತಿದ್ದರು. ಆದರೆ ಅವರ ಬಳಿ ಬೆಂಗಳೂರಿನಲ್ಲಿ ಒಂದು 30-40 ನಿವೇಶನ ಇರಲಿಲ್ಲ. ಹೀಗಾಗಿ ಗಾಳಿ ಮಾತಿನ ಚರ್ಚೆಗೆ ನಾವು ಮಹತ್ವ ನೀಡಬಾರದು ಎಂದು ಅವರು ಹೇಳಿದರು.

 

ನಮ್ಮ ಪಕ್ಷದಲ್ಲಿ ಪರ್ಸಂಟೇಜ್ ಪದ್ಧತಿ ಇಲ್ಲ. ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಯಾರ ವಿರುದ್ಧವಾದರೂ ಆರೋಪ ಇತ್ತ? ನಮ್ಮ ಸರಕಾರದಲ್ಲಿ 0 ಪರ್ಸೆಂಟ್ ಇತ್ತು. ಈಗ ಬಿಜೆಪಿ ಸರಕಾರದಲ್ಲಿ 20 ಪರ್ಸೆಂಟ್ ಆಗಿರಬಹುದು. ಸಲೀಮ್ 12 ಪರ್ಸೆಂಟ್ ಬಗ್ಗೆ ಮಾತನಾಡಿರುವುದು ಶುದ್ಧ ಸುಳ್ಳು ಎಂದು ರಾಮಲಿಂಗಾರೆಡ್ಡಿ ಹೇಳಿದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version