ಕಾಂಗ್ರೆಸ್ ಇಪ್ಪತ್ತು ವರ್ಷದಲ್ಲಿ ನಿರ್ನಾಮ ಆಗಲಿದೆ: ಸಚಿವ ಉಮೇಶ್ ಕತ್ತಿ

ಕಾಂಗ್ರೆಸ್ ಇಪ್ಪತ್ತು ವರ್ಷದಲ್ಲಿ ನಿರ್ನಾಮ ಆಗಲಿದೆ: ಸಚಿವ ಉಮೇಶ್ ಕತ್ತಿ

ಬೆಳಗಾವಿ: ಪ್ರತಿಪಕ್ಷ ಕಾಂಗ್ರೆಸ್ ಇನ್ನು 20 ವರ್ಷದಲ್ಲಿ ನಿರ್ನಾಮ ಆಗಲಿದೆ. ಆ ಮೂಲಕ ವಾಜಪೇಯಿ ಅವರ ಕನಸು ನನಸಾಗುತ್ತದೆ’ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

 

ಬುಧವಾರ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ, `ಕರ್ನಾಟಕದ ಮುಸ್ಲಿಮರು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಬೇಕು. ಎಂಐಎಂ ಎಂದರೆ ಅವರು ಪಾಕಿಸ್ತಾನದಿಂದ ಬಂದವರು ಅಲ್ಲ. ಭಾರತದಲ್ಲಿ ಹುಟ್ಟಿರುವ ಮುಸ್ಲಿಮರು, ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ದೂರ ಇಡಲು ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು’ ಎಂದು ಮನವಿ ಮಾಡಿದರು.

 

`ಎಂಐಎಂ ಹಾಗೂ ಎಂಇಎಸ್ ಧ್ವಜಗಳು ಚುನಾವಣೆ ಬಂದಾಗ ಮಾತ್ರ ಕಾಣುತ್ತಿವೆ. ಅಭಿವೃದ್ಧಿಗಾಗಿ ನಾವು ನಿರಂತರ ದೇಶ ಆಳುತ್ತಿದ್ದೇವೆ. ಹೀಗಾಗಿ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿ. ಎಂಐಎಂ ಬಿಜೆಪಿ ಪಕ್ಷದ ಏಜೆಂಟ್ ಎನ್ನುವ ಆರೋಪ ವಿಚಾರವಾಗಿ ಬಿಜೆಪಿ ಪಕ್ಷ ಜನರ ಹಾಗೂ ಅಭಿವೃದ್ಧಿಯ ಏಜೆಂಟ್. ಬೆಳಗಾವಿ ಪಾಲಿಕೆಯಲ್ಲಿ 35ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ. ಎಂಇಎಸ್ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ’ ಎಂದು ಉಮೇಶ್ ಸ್ಪಷ್ಟಪಡಿಸಿದರು

 

`ಕಾಂಗ್ರೆಸ್ ಹಾಗೂ ಎಂಇಎಸ್ ಎರಡು ಸೇರಿ ಆಡಳಿತ ಮಾಡುತ್ತಿವೆ. ಜನ ಈ ಎರಡೂ ಪಕ್ಷಗಳಿಗೆ ಬುದ್ಧಿ ಕಲಿಸಬೇಕಿದೆ. ಐದು ವರ್ಷದಲ್ಲಿ ಅಭಿವೃದ್ಧಿ ಮಾಡಲಿಲ್ಲ ಎಂದರೆ ನಮ್ಮನ್ನು ಮನೆಗೆ ಕಳುಹಿಸಿ. ಬೆಳಗಾವಿಗೆ ಕೇಂದ್ರ ಸರಕಾರ ಒಂದು ಸಾವಿರ ಕೋಟಿ ರೂ.ಅನುದಾನ ನೀಡಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಪಕ್ಷ ಇನ್ನೂ 20 ವರ್ಷ ಅಧಿಕಾರದಲ್ಲಿರುತ್ತದೆ. ಬೆಳಗಾವಿಯ ಮಹಾನಗರ ಪಾಲಿಕೆಯಲ್ಲೂ 20 ವರ್ಷ ಬಿಜೆಪಿ ಅಧಿಕಾರದಲ್ಲಿರಬೇಕು’ ಎಂದು ಉಮೇಶ್ ಕತ್ತಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಬಿಜೆಪಿ ಮುಖಂಡರಾದ ಪರಗೌಡ ಪಾಟೀಲ್, ಗುರು ಕುಲಕರ್ಣಿ, ರೋಹಿತ ಚೌಗಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version