ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರ ವಿಶೇಷ ಪೂಜೆ ಸಲ್ಲಿಕೆ

ಮೈಸೂರು.

ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದಂದೂ ಕೂಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಸಾಂಪ್ರದಾಯಿಕ ಆಷಾಢದ ವಿಶೇಷ ಪೂಜೆ ಭಕ್ತರ ಅನುಪಸ್ಥಿತಿಯಲ್ಲಿಯೇ ನಡೆದಿದೆ .

 

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶ ನಿರ್ಬಂಧದ ಮಧ್ಯೆಯೇ ಇಂದು ದೇವಸ್ಥಾನದ ಆರ್ಚಕರು ಹಾಗೂ ಆಡಳಿತ ಮಂಡಳಿ ಸಮ್ಮುಖದಲ್ಲಿ ಚಾಮುಂಡೇಶ್ವರಿಗೆ 4.30 ರಿಂದಲೇ ರುದ್ರಾಭಿಷೇಕ , ಅರ್ಚನೆಯಂತಹ ಧಾರ್ಮಿಕ ಕಾರ್ಯ ನಡೆದು 7.30 ಕ್ಕೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು . ಬೆಳಿಗ್ಗೆ ಚಾಮುಂಡೇಶ್ವರಿ ತಾಯಿ ವಿಶೇಷ ಮೊಗ್ಗಿನ ಜಡೆ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು .

ಬಳಿಕ ಮಹಾಮಂಗಳಾರತಿ ನಡೆದಿತ್ತು . ದೇವಾಲಯ ತೆರೆದಿದ್ದರೂ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ . ಸಂಜೆ 6.30 ರಿಂದ ಮತ್ತೆ ವಿಶೇಷ ಅಭಿಷೇಕ ನಡೆಯಲಿದ್ದು ಬಳಿಕ ದೇವಾಲಯದ ಬಾಗಿಲು ಮುಚ್ಚಲಿದೆ . ದೇವಾಲಯದ ಒಳಾಂಗಣವನ್ನು ಪುಷ್ಪಗಳಿಂದ ಅಲಂಕರಿಸಿ ಸಿಂಗಾರ ಮಾಡಲಾಗಿದೆ .

 

ಚಾಮುಂಡಿ ದೇವಾಲಯದ ಒಳಾಂಗಣ ನವವಧುವಿನಂತೆ ಕಂಗೊಳಿಸುತ್ತಿದೆ . ಪ್ರತಿವರ್ಷವೂ ಸಹಸ್ರಾರು ಭಕ್ತರು ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆಯುವುದರ ಜೊತೆಗೆ ಹರಕೆಯನ್ನೂ ಒಪ್ಪಿಸುತ್ತಿದ್ದರು .

 

ಕಳೆದ ವರ್ಷದಿಂದ ಕೊರೋನಾ ಮಹಾಮಾರಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ಮತ್ತು ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನಗಳಿಗೆ ಆಷಾಢ ಶುಕ್ರವಾರ ಸೇರಿದಂತೆ ವಾರಾಂತ್ಯದಲ್ಲಿ , ಸರ್ಕಾರಿ ರಜಾದಿನಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ . ಪ್ರತಿ ವರ್ಷವೂ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಸಹಸ್ರಾರುಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ . ಆದರೆ ಸೋಂಕು ಹರಡುವ ಭೀತಿಯಿಂದ ಈ ಬಾರಿಯೂ ಚಾಮುಂಡಿ ಬೆಟ್ಟ , ಉತ್ತನಹಳ್ಳಿ ತ್ರಿಪುರ ಸುಂದರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ . ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಈಗಾಗಲೇ ಆದೇಶ ಹೊರಡಿಸಿದ್ದು , ಕಳದೆ ವರ್ಷದಂತೆ ಈ ಬಾರಿಯೂ ಕೋವಿಡ್ -19 ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ಆಷಾಢದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು , ಧಾರ್ಮಿಕ ಕೈಂಕರ್ಯಗಳು ಎಂದಿನಂತೆ ನಡೆದಿವೆ

Leave a Reply

Your email address will not be published. Required fields are marked *

You cannot copy content of this page

error: Content is protected !!