ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲ ಕೆಪಿಸಿಸಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ವಾಗ್ಧಾಳಿ

 

ದೇವನಹಳ್ಳಿ: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದೆ. ಕೊರೊನಾದಿಂದ ಸಾವನ್ನಪ್ಪಿರುವ ಅಂಕಿ ಅಂಶಗಳನ್ನು ಮರೆಮಾಚಿದ್ದು, ಸಾವನ್ನಪ್ಪಿರುವ ಕುಟುಂಬಗಳಿಗೆ ಸಹಾಯಧನ ನೀಡುವಲ್ಲಿಯೂ ಸಹ ವಿಫಲಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ತಿಳಿಸಿದರು.

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಹಾಯಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದಾಗಿ ಸಾವನ್ನಪ್ಪಿರುವ ಜನರ ಕುಟುಂಬಕ್ಕೆ ಭೇಟಿ ನೀಡಿ ಅವರ ಕುಂದುಕೊರತೆ ಮತ್ತು ಸಮಸ್ಯೆಯನ್ನು ಆಲಿಸಬೇಕು. ಅವರಿಗೆ ಸಾಂತ್ವಾನ ನೀಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗುತ್ತದೆ. ಕೋವಿಡ್‌ನಿಂದ ರಾಜ್ಯದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಅಂಕಿ ಅಂಶಗಳಲ್ಲಿ ಸರಿಯಾದ ಮಾಹಿತಿ ನೀಡದೆ ವಿಫಲವಾಗಿದೆ. ರಾಜ್ಯದಾದ್ಯಂತ ೨೨೪ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಸಹಾಯಹಸ್ತ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿ ಕೊರೊನಾದಿಂದ ಸಾವನ್ನಪ್ಪಿರುವ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಹಾಯಹಸ್ತವನ್ನು ಮಾಡಬೇಕಾಗುತ್ತದೆ. ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಪ್ರತಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

 

ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ಕೋವಿಡ್‌ನಿಂದ ೧೩೧ ಜನರು ಸತ್ತಿದ್ದಾರೆ. ಗುಣಮುಖರಾಗಿರುವುದು ೧೨ ಸಾವಿರ ಜನ. ವೈಯಕ್ತಿಕವಾಗಿ ದೂರವಾಣಿ ಮೂಲಕ ಗ್ರಾಮಗಳಿಂದ ಮಾಹಿತಿ ಪಡೆದಾಗ ೨೮೫ಜನ ಸತ್ತಿದ್ದಾರೆ ಎಂದು ಮಾಹಿತಿ ಇದೆ. ಆದರೆ ಸರಕಾರದಲ್ಲಿ ೧೩೧ ಜನ ಸತ್ತಿದ್ದಾರೆ ಎಂದು ನಮೂದಾಗಿದೆ. ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ಸಾದಹಳ್ಳಿ ಜಿಲ್ಲಾ ಪಂಚಾಯತ್ ಸಹಾಯ ಹಸ್ತ ಕಾರ್ಯಕ್ರಮದಲ್ಲಿಯೂ ಸಹ ಕೋವಿಡ್ ಅಂಕಿಅಂಶ ಕೇಳಲಾಗಿತ್ತು. ಅದರಲ್ಲೂ ಸಹ ಸರಕಾರ ಮರೆಮಾಚಿರುವುದು ಕಂಡುಬಂದಿದೆ. ಕ್ಷೇತ್ರದಲ್ಲಿ ಶಾಸಕರಾಗಿರುವ ಜೆಡಿಎಸ್ ಪಕ್ಷದ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಶಾಸಕರಾಗಿ ತಾಲೂಕಿನಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಅವರ ಪಾತ್ರ ಶೂನ್ಯವಾಗಿದೆ ಎಂದರು.

 

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ತಳಮಟ್ಟದಿಂದ ಗಟ್ಟಿಯಾಗಿದ್ದು, ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನಮ್ಮ ಎದುರಾಳಿಯಾಗಿದೆ. ಪ್ರತಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ಜಿಪಂ, ತಾಪಂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದರ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ ಎಂದು ಹೇಳಿದರು.

 

ಈ ವೇಳೆಯಲ್ಲಿ ಮಾಜಿ ಲೋಕಸಭಾ ಸದಸ್ಯ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಮುನಿನರಸಿಂಹಯ್ಯ, ಮುಖಂಡರಾದ ಸಿ.ಜಗನ್ನಾಥ್, ಚೇತನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಉಪಾಧ್ಯಕ್ಷ ವಿ.ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜ್, ಹೋಬಳಿ ಅಧ್ಯಕ್ಷರಾದ ಕೋದಂಡರಾಮ್, ರಾಮಚಂದ್ರಪ್ಪ, ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ಶಿವಣ್ಣ, ಕೃಷ್ಣರೆಡ್ಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ರೇವತಿ, ಜಿಪಂ ಮಾಜಿ ಸದಸ್ಯರಾದ ಅನಂತಕುಮಾರಿ ಚಿನ್ನಪ್ಪ, ಕೆ.ಸಿ.ಮಂಜುನಾಥ್, ರಾಧಮ್ಮ ಮುನಿರಾಜು, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ಲಕ್ಷ್ಮಣ್‌ಗೌಡ, ಲಕ್ಷ್ಮಣ್ ಮೂರ್ತಿ, ಡಿ.ಎನ್.ವೆಂಕಟೇಶ್, ಅಕ್ಕಯ್ಯಮ್ಮ, ಮಂಜುಳಾ, ಲಕ್ಷ್ಮೀ, ಟೌನ್ ಕಾರ್ಯದರ್ಶಿ ಕೊಕೊಕೋಲಾ ಮಂಜು, ಯುವ ಮುಖಂಡರಾದ ಕೆ.ವಿ.ಸ್ವಾಮಿ, ಬಿ.ವಿ.ಸ್ವಾಮಿ, ಮುನಿಕೃಷ್ಣ, ಮುಖಂಡರು ಕಾರ್ಯಕರ್ತರು ಇದ್ದರು

 

ಹೈದರ್ ಸಾಬ್ ದೇವನಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!