ಗುಬ್ಬಿ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಧೂಳುಮಯವಾದ ಜಿ.ಹರಿವೇಸಂದ್ರ ಗ್ರಾಮ : ಸರ್ವಿಸ್ ರಸ್ತೆ ಕೂಡಾ ನೀಡದ ಹಿನ್ನಲೆ ಆಕ್ರೋಶ ಹೊರ ಹಾಕಿದ ಗ್ರಾಮಸ್ಥರು.
ರಾಷ್ಟ್ರೀಯ ಹೆದ್ದಾರಿ 206 ರಸ್ತೆಯನ್ನು ಮೇಲ್ದರ್ಜೆಗೇರಿಸಿ ಚತುಷ್ಪಥ ರಸ್ತೆ ಕಾಮಗಾರಿ ನಡೆದು ಗುಬ್ಬಿ ಪಟ್ಟಣವನ್ನು ಬಳಸಿ ಸಾಗುವ ರಸ್ತೆ ಕೆಲಸ ಚುರುಕಿನಲ್ಲಿ ನಡೆದಿದೆ. ಆದರೆ ರಸ್ತೆಗೆ ಜಮೀನು ಬಿಟ್ಟುಕೊಟ್ಟ ಜಿ.ಹರಿವೇಸಂದ್ರ ಗ್ರಾಮ ಮಾತ್ರ ಧೂಳುಮಯವಾಗಿದೆ. ಈ ಮಾಲಿನ್ಯ ನಡುವೆ ಗ್ರಾಮಕ್ಕೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಕೊಡುವಲ್ಲಿ ಸಹ ಪ್ರಾಧಿಕಾರ ಸಲ್ಲದ ಸಬೂಬು ಹೇಳುತ್ತಿದೆ ಎಂದು ಜಿ.ಹರಿವೇಸಂದ್ರ ಗ್ರಾಮಸ್ಥರು ಆರೋಪಿಸಿದರು.
ಚುರುಕಿನ ಕಾಮಗಾರಿ ನಡೆಸುವ ಭರದಲ್ಲಿ ಹಗಲಿರುಳು ಕೆಲಸ ನಡೆಯುತ್ತಿದೆ. ಆದರೆ ಮಣ್ಣಿನ ಕೆಲಸ ಸಂಪೂರ್ಣ ಧೂಳುಮಯ ಮಾಡಿದೆ. ವಾಯುಮಾಲಿನ್ಯದಿಂದ ಈಗಾಗಲೇ ಗ್ರಾಮಸ್ಥರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಬಗ್ಗೆ ಹಲವು ಬಾರಿ ಎಚ್ಚರಿಸಿದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಕೇಳಿದರೆ ಬೆಳಿಗ್ಗೆ ಸಂಜೆ ನೀರು ಹಾಕುತ್ತಿರುವ ಬಗ್ಗೆ ಹೇಳುತ್ತಾರೆ. ವಾಸ್ತವದಲ್ಲಿ ನೀರು ಹಾಕುತ್ತಿಲ್ಲ. ಇಡೀ ಗ್ರಾಮವೇ ಧೂಳುಮಯವಾಗಿದೆ ಎಂದು ಸ್ಥಳೀಯ ಮುಖಂಡ ಸಿದ್ಧರಾಮಯ್ಯ ದೂರಿದರು.
24 ಗಂಟೆ ಕೆಲಸ ನಡೆಯುವ ಈ ಹೆದ್ದಾರಿ ಕೆಲಸ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದೆ. ಪ್ರತಿ ಗಂಟೆಗೊಮ್ಮೆ ನೀರು ಹಾಯಿಸಿ ಮಣ್ಣಿನ ಕೆಲಸ ಮಾಡಬೇಕಿದೆ. ಆದರೆ ಕಣ್ಣೊರೆಸುವ ರೀತಿ ಬೆಳಿಗ್ಗೆ ಸಂಜೆ ಎರಡು ಬಾರಿ ಮಾತ್ರ ನೀರು ಹಾಕಿ ತಮ್ಮ ಕೆಲಸ ಮುಗೀತು ಎಂಬ ಧೋರಣೆ ತೋರುತ್ತಿದ್ದಾರೆ. ಈಗಾಗಲೇ ಪ್ರಾಧಿಕಾರಕ್ಕೆ ತಿಳಿಸಿದ್ದರೂ ಸೂಕ್ತ ಉತ್ತರ ಬರುತ್ತಿಲ್ಲ. ಜನ ಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಧೂಳು ನಿಯಂತ್ರಣ ಮಾಡಿ ಗ್ರಾಮಕ್ಕೆ ಸರ್ವಿಸ್ ರಸ್ತೆ ಒದಗಿಸದಿದ್ದರೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಮಂಜಣ್ಣ, ವೆಂಕಟೇಶ್, ನವೀನ್, ಭಾಗ್ಯಮ್ಮ, ಸಚಿನ್, ಶಿವು, ಗಿರೀಶ್, ತಮ್ಮಯ್ಯಪ್ಪ ಇತರರು ಇದ್ದರು