ಈಶ್ವರಪ್ಪ ಹಾಸಿಗೆ ಸಿದ್ಧಪಡಿಸಿದರೆ ಆಸ್ಪತ್ರೆಗೆ ದಾಖಲಾಗಲು ನಾನು ಸಿದ್ದ: ಡಿ.ಕೆ.ಶಿವಕುಮಾರ್ ತಿರುಗೇಟು

ಈಶ್ವರಪ್ಪ ಹಾಸಿಗೆ ಸಿದ್ಧಪಡಿಸಿದರೆ ಆಸ್ಪತ್ರೆಗೆ ದಾಖಲಾಗಲು ನಾನು ಸಿದ್ದ: ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರು ಆದಷ್ಟು ಬೇಗ ಆಸ್ಪತ್ರೆಯಲ್ಲಿ ಹಾಸಿಗೆ (ಬೆಡ್) ಸಿದ್ಧಪಡಿಸಿದರೆ ನಾನು ಕೂಡಲೇ ದಾಖಲಾಗುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಸವಾಲು ಹಾಕಿದ್ದಾರೆ.

ರವಿವಾರ ದೇವನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಯಾರೋ ಒಬ್ಬರು ಮಂತ್ರಿಯಾಗಿದ್ದವರು 24 ಗಂಟೆಗಳಲ್ಲಿ ಕಾಂಗ್ರೆಸ್‍ನ 5 ದೊಡ್ಡ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದಿದ್ದರು. ನಳಿನ್ ಕುಮಾರ್ ಕಟೀಲ್ ಅವರು 20 ಜನ ಶಾಸಕರು ಸರದಿಯಲ್ಲಿ ನಿಂತಿದ್ದಾರೆಂದು ಹೇಳಿದ್ದರು’ ಎಂದು ವಾಗ್ದಾಳಿ ನಡೆಸಿದರು.

`ನಾವು ಯಾರಾದರೂ ಒಬ್ಬ ಶಾಸಕರು ನಮ್ಮ ಪಕ್ಷ ಸೇರುತ್ತಾರೆಂದು ಹೆಸರು ಹೇಳಿದ್ದೇವೆಯೇ? ನಮ್ಮ ರಾಜಕಾರಣ ನಾವು ಮಾಡುತ್ತಿದ್ದೇವೆ. ಇವರಿಗೆ ಭಯ ಏಕೆ? ನನ್ನನ್ನು ಮಾನಸಿಕ (ಮೆಂಟಲ್) ಆಸ್ಪತ್ರೆಗೆ ಸೇರಿಸಲು ಅವರು ಬಯಸಿದ್ದು, ಹಾಸಿಗೆ ವ್ಯವಸ್ಥೆ ಕಲ್ಪಿಸಿದರೆ ನಾನು ಹೋಗಿ ದಾಖಲಾಗುತ್ತೇನೆ’ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಕುಮಾರಣ್ಣನಿಗೆ ಗೊತ್ತಿದೆ: `ನಾನು ಕುಮಾರಣ್ಣನಿಗೆ ಒಂದು ಮನವಿ ಮಾಡಿಕೊಳ್ಳುತ್ತೇನೆ. ಈ ರಾಜ್ಯದ ಚರಿತ್ರೆಯನ್ನೇ ತೆಗೆದುಕೊಂಡರೆ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ಗುಂಡೂರಾವ್, ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಸಮಾಜಕ್ಕೆ ಯಾವುದಾದರೂ ಪಕ್ಷ ಅಧಿಕಾರ ಕೊಟ್ಟಿದೆ ಎಂದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಎಲ್ಲ ವರ್ಗದ ಪರ ಕಾರ್ಯಕ್ರಮ ರೂಪಿಸುತ್ತದೆ ಎಂದು ಶಿವಕುಮಾರ್ ಹೇಳಿದರು.

`ಬಿಜೆಪಿಯಲ್ಲಾಗಲಿ, ಜನತಾದಳದಲ್ಲಾಗಲಿ ಒಕ್ಕಲಿಗರು ಹಾಗೂ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಅಧಿಕಾರ ನೀಡಿರುವ ಒಂದು ಉದಾಹರಣೆ ನೀಡಲಿ. ಅವರಿಗೆ ಆ ಇತಿಹಾಸವೇ ಇಲ್ಲ. ನಮ್ಮ ಪಕ್ಷ ಕಾಲಕಾಲಕ್ಕೆ ಆಯಾ ಸಮುದಾಯಕ್ಕೆ ನಾಯಕತ್ವ, ರಾಜಕೀಯ ಪಾಲುದಾರಿಕೆ, ಮೀಸಲಾತಿ ಕಲ್ಪಿಸಿದೆ’ ಎಂದು ಶಿವಕುಮಾರ್ ವಿವರಣೆ ನೀಡಿದರು.

ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ ಕೋವಿಡ್ ಸಮಯದಲ್ಲಿ ಪರಿಹಾರ ನೀಡಬೇಕೆಂದು ಹೋರಾಟ ಮಾಡಿದ್ದೇವೆ. ನಾನು ಯಾರಿಗೂ ಭಯಪಡುವ ಅಗತ್ಯವಿಲ್ಲ. ನನಗೆ ನಡುಕ ಬರುತ್ತದೆಯೋ ಇಲ್ಲವೋ ಎಂಬುದು ಕುಮಾರಣ್ಣನಿಗೆ ಚೆನ್ನಾಗಿ ಗೊತ್ತಿದೆ. ರಾಜಕಾರಣ ಮಾತನಾಡುತ್ತಾರೆ, ಮಾತನಾಡಲಿ. ನಾನು ವಿವಿಧ ಸಮಾಜದವರನ್ನು ಭೇಟಿ ಮಾಡಿಕೊಂಡು ಅವರ ನೋವು ತಿಳಿದು, ಅವರ ಏಳ್ಗೆ ಬಗ್ಗೆ ಚರ್ಚಿಸುತ್ತಿದ್ದೇವೆ. ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಬದ್ಧತೆ’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

 

`ನಿಮ್ಮ ಸಮಾಜದ ಸಮಸ್ಯೆ ಏನು? ನಿಮ್ಮ ಕಲ್ಯಾಣಕ್ಕೆ ನಾವು ಯಾವ ದಿಕ್ಕಿನಲ್ಲಿ ಹೋಗಬೇಕೆಂಬುದನ್ನು ತಿಳಿಸಿ. ಗಾಣಿಗ ಸಮಾಜಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಯಾವುದೇ ಒಂದು ಸರಕಾರಕ್ಕೆ ಗುರಿ ಇರಬೇಕು. ನಿಮ್ಮ ಸಮಸ್ಯೆ ತಿಳಿಸಿದರೆ ಚುನಾವಣೆಗೆ ಹೋದಾಗ ಈ ಸಮಾಜದ ಏಳಿಗೆಗೆ ಪೂರಕವಾಗಿ ನಮ್ಮ ಪ್ರಣಾಳಿಕೆ ಸಿದ್ಧಪಡಿಸುತ್ತೇವೆ’ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!