ಅತ್ಯಾಚಾರವೆಸಗಿ ಮಹಿಳೆ ಕೊಲೆ

ಅತ್ಯಾಚಾರವೆಸಗಿ ಮಹಿಳೆ ಕೊಲೆ.

 

ತುಮಕೂರು- ಬೆಟ್ಟದ ಬುಡಕ್ಕೆ ದನ ಮೇಯಿಸಲು ತೆರಳಿದ್ದ ಮಹಿಳೆಯ ಮೇಲೆ ಯಾರೋ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಆಕೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಕೊಲೆಗೈದು ಪರಾರಿಯಾಗಿರುವ ಘಟನೆ ಇಲ್ಲಿನ ಕ್ಯಾತ್ಸಂದ್ರ ಸರಹದ್ದಿನಲ್ಲಿ ನಡೆದಿದೆ.

ನಗರದ ಹೊರವಲಯದ ಹಿರೇಹಳ್ಳಿ ಸಮೀಪದಲ್ಲಿರುವ ಬೆಟ್ಟದ ಬುಡದಲ್ಲಿ ಈ ದುರ್ಘಟನೆ ನಡೆದಿದ್ದು, ಕೊಲೆಯಾಗಿರುವ ಮಹಿಳೆಯನ್ನು ಚೋಟಾಸಾಬರ ಪಾಳ್ಯದ ನಿವಾಸಿ ಶಿವಕುಮಾರ್ ಎಂಬುವರ ಪತ್ನಿ ಜಯಲಕ್ಷ್ಮಿ (35) ಎಂದು ಗುರುತಿಸಲಾಗಿದೆ.

ಕೊಲೆಯಾಗಿರುವ ಜಯಲಕ್ಷ್ಮಿ ಅವರು ಎಂದಿನಂತೆ ದನ ಮೇಯಿಸಲು ಬೆಟ್ಟದ ಹತ್ತಿರಕ್ಕೆ ಹೋಗಿದ್ದಾರೆ. ಸಂಜೆ 6.45 ಗಂಟೆಯಾದರೂ ಪತ್ನಿ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಪತಿ ಶಿವಕುಮಾರ್ ಪತ್ನಿಯನ್ನು ಹುಡುಕಿಕೊಂಡು ಹೋದಾಗ ಬೆಟ್ಟದ ಬುಡದಲ್ಲಿ ತನ್ನ ಪತ್ನಿಯ ಶವ ಪತ್ತೆಯಾಗಿದೆ.

ಪತ್ನಿ ಕೊಲೆಯಾಗಿ ಶವ ಬಿದ್ದಿರುವುದನ್ನು ಕಂಡ ಪತಿ ಶಿವಕುಮಾರ್ ತೀವ್ರ ರೋಧನಕ್ಕೆ ಒಳಗಾಗಿ ಗ್ರಾಮಸ್ಥರಿಗೂ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕ್ಯಾತ್ಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಯಾರೋ ದುಷ್ಕರ್ಮಿಗಳು ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಸಿದು ಕೊಲೆಗೈದು ಪರಾರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇಂದು ಬೆಳಿಗ್ಗೆ ಘಟನೆ ನಡೆದ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡವೂ ಸಹ ಭೇಟಿ ನೀಡಿ ತಪಾಸಣೆ ನಡೆಸಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹು‌ಲ್‌ಕುಮಾರ್, ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿ, ಈ ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!