ಸಚಿವರಿಗೆ ಶೀಘ್ರ ಖಾತೆ ಹಂಚಿಕೆ: ಸಿಎಂ

ಸಚಿವರಿಗೆ ಶೀಘ್ರ ಖಾತೆ ಹಂಚಿಕೆ: ಸಿಎಂ

 

ತುಮಕೂರು- ನೂತನ ಸಚಿವರಿಗೆ ಶೀಘ್ರ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದರು.

 

ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

 

ಸಿದ್ದಗಂಗಾ ಮಠದಿಂದ ನೇರವಾಗಿ ಬೆಂಗಳೂರಿಗೆ ತೆರಳುತ್ತಿದ್ದು, ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವ ಸಂಬಂಧ ಪಟ್ಟಿ ಮಾಡಿ ರಾಜ್ಯಪಾಲರಿಗೆ ಕಳುಹಿಸಿಕೊಡುತ್ತಿರುವುದಾಗಿ ಹೇಳಿದರು.

ಪ್ರಮಾಣ ವಚನ ಸ್ವೀಕರಿಸಿರುವ 29 ಮಂದಿ ನೂತನ ಸಚಿವರುಗಳಿಗೂ ಶೀಘ್ರ ಖಾತೆ ಹಂಚಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಿದ್ದಗಂಗಾ ಮಠ ಬಹಳ ದಾನ, ಅನ್ನದಾನಕ್ಕೆ ಪ್ರಸಿದ್ದವಾಗಿದೆ. ಈ ಮಠಕ್ಕೆ ಬಂದಾಗ ಪ್ರೇರಣೆ ಪಡೆದುಕೊಂಡಿದ್ದೇನೆ. ನಾನು ಮುಖ್ಯಮಂತ್ರಿಯಾದ ಮೇಲೆ ಮಠಕ್ಕೆ ಪ್ರಥಮ ಬಾರಿಗೆ ಬರುತ್ತಿದ್ದು, ನಾಡಿನ ಸೇವೆ ಮಾಡಲಿಕ್ಕೆ ಲಿಂಗೈಕ್ಯ ‌ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೇನೆ. ಹಾಗೆಯೇ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಚಿವರುಗಳಾದ ವಿ. ಸೋಮಣ್ಣ, ಬಿ.ಸಿ. ನಾಗೇಶ್, ಮುರುಗೇಶ್ ನಿರಾಣಿ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಜ್ಯೋತಿಗಣೇಶ್, ಡಾ. ರಾಜೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್‌ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!