ಜಿಲ್ಲಾಡಳಿತ ಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
ನೀವು ನೀಡುವ ರಕ್ತ ಮತ್ತೊಬ್ಬರಿಗೆ ಜೀವದಾನ, ರಕ್ತದಾನ ಮಹಾದಾನ-ಡಾ|| ಮಂಜುಳಾದೇವಿ
ದೇವನಹಳ್ಳಿ : ರಕ್ತದಾನದಿಂದ ಹೊಸ ರಕ್ತ ಉತ್ಪಾದನೆಯಿಂದ ದೇಹ ಉಲ್ಲಸಿತವಾಗಿರುವುದಲ್ಲದೇ, ಕೊಬ್ಬಿನಿಂದ ಮುಕ್ತಿ ದೊರಕುತ್ತದೆ ಹಾಗೂ ಅದಿಕ ರಕ್ತದೊತ್ತಡ ಸೇರಿದಂತೆ ಅನೇಕ ಉಪಯೋಗವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ. ಮಂಜುಳಾದೇವಿ ತಿಳಿಸಿದರು.
ಅವರು ಬೆಂ.ಗ್ರಾ. ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆ ಹಾಗೂ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ, ಔಷದ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಅದೇಷ್ಟೊ ಬಾಣಂತಿಗಳು ಅನೀಮಿಯಾದಿಂದ, ರಕ್ತ ಹೀನತೆಯಿಂದ ಸಾವನ್ನಪ್ಪುತ್ತಿದ್ದು ಈ ನಿಟ್ಟಿನಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಉಚಿತವಾಗಿ ರಕ್ತವನ್ನು ನೀಡಲಾಗುತ್ತಿದೆ, ರಕ್ತ ಯಾವುದೇ ಪ್ಯಾಕ್ಟರಿಯಲ್ಲಿ ತಯಾರಾಗುವುದಿಲ್ಲ ಮನುಷ್ಯನ ದೇಹದಿಂದಲೇ ಶೇಖರಣೆ ಮಾಡಬೇಕಾಗುತ್ತದೆ ರಕ್ತದಾನ ಮಾಡಿ ಜೀವ ಉಳಿಸಿ ಎಂದರು.
ಜಿ.ಪಂ. ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ ಮನುಷ್ಯನಿಗೆ ಉತ್ತಮವಾದ ಆರೋಗ್ಯವಿರಬೇಕು, ಇಲ್ಲದಿದ್ದರೆ ಎಷ್ಟೇ ಐಶ್ವರ್ಯ ಇದ್ದರೂ ಪ್ರಯೋಜನವಿಲ್ಲ ಒಬ್ಬರು ನೀಡುವ ರಕ್ತ ಮೂರು ಜನ ಬಡರೋಗಿಗಳ ಜೀವನವನ್ನು ಬೆಳಗುತ್ತದೆ ಆದ್ದರಿಂದ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ, ಜಗತ್ತಿನಲ್ಲಿ ಉತ್ಪಾದನೆ ಮಾಡಲಾಗದ ವಸ್ತುವೆಂದರೆ ಅದು ರಕ್ತ, ಇದನ್ನು ಮನುಷ್ಯನ ದೇಹದಿಂದಲೇ ಪಡೆದು ಮತ್ತೊಬ್ಬರಿಗೆ ನೀಡಬೇಕಾಗುತ್ತದೆ, ಇದರಿಂದ ಅನೇಕ ಜನರ ಜೀವವನ್ನು ಉಳಿಸಿದ ಕೀರ್ತಿ ದಾನಿಗಳಿಗೆ ಸೇರುತ್ತದೆ, ಆದ್ದರಿಂದ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಎಂದರು.
ಈ ಸಮಯದಲ್ಲಿ ಕೆ.ಸಿಜನರಲ್ ಆಸ್ಪತ್ರೆಯ ಡಾ|| ಶಾಂತ ಮಾತನಾಡಿ ಹೆಣ್ಣು ಗಂಡೆಂಬ ಬೇದಬಾವವಿಲ್ಲದೇ ಆರೋಗ್ಯವಂತ ೧೮ ರಿಂದ ೬೦ ವರ್ಷದ ಪುರುಷರು ೩ ತಿಂಗಳಿಗೊಮ್ಮೆ, ಮಹಿಳೆಯರು ೪ತಿಂಗಳಿಗೊಮ್ಮ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ಹೊಸ ರಕ್ತ ಶೇಖರಣೆಯಾಗುತ್ತದೆ, ಹೆರಿಗೆ ಸಮಯದಲ್ಲಿ ರಕ್ತಸ್ರಾವದಿಂದ ನರಳುವ ಬಾಣಂತಿಯರಿಗೆ ಉಚಿತ ರಕ್ತ ನೀಡುತ್ತೇವೆ ಬಿಪಿಎಲ್ ಕಾರ್ಡ್ ಬೇಕಾಗುತ್ತದೆ, ಇತರರಿಗೆ ೩೦೦ರಿಂದ ೩೫೦ ರೂ.ಗಳ ಕಡಿಮೆ ಹಣಕ್ಕೆ ರಕ್ತ ದೊರೆಯುತ್ತದೆ ಎಂದರು.
ಇದೇ ಸಮಯದಲ್ಲಿ ಜಿಲ್ಲಾ ಪಂಚಾಯತ್ನಿಂದ ಆರೋಗ್ಯ ಅರಿವು ಮತ್ತು ವಸ್ತು ಪ್ರದರ್ಶನದಲ್ಲಿ ಸಮತೋಲನ ಆಹಾರ, ಪ್ರೋಟೀನ್, ವಿಟಮಿನ್ಗಳ ಬಗ್ಗೆ ಜಾಗೃತಿ ಮತ್ತು ಅರಿವು ನೀಡಲಾಯಿತು
ಈ ಸಮಯದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ|| ಧರ್ಮೇಂದ್ರ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ಶಕೀಲಾ, ಡಾ|| ಸನತ್ಕುಮಾರ್, ಡಾ|| ವಿದ್ಯಾರಾಣಿ, ಕುಂದಾಣ, ವಿಶ್ವನಾಥಪುರ ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಿತ್ರಸುದ್ದಿ : ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಅಧಿಕಾರಿಗಳು ಸಾರ್ವಜನಿಕರು.
ಗುರುಮೂರ್ತಿ ಬೂದಿಗೆರೆ
8861100990